Friday, 9 December 2011

ಜಾನಂ ತುಂ ನೋಡೋಕೆ ಎಷ್ಟು ಖುಬ್ ಸೂರತ್
ಅದಕ್ಕೆ ಮೆ ದಿನ ಬರ್ತೀನಿ
ತುಮರ ಘರ್ ಹತ್ರ ,ಮರೆತು ಮೇರ ಇಜ್ಜತ್
ನೀನು ಬೀ ಕಮ್ ನಹಿ, ಇದ್ದೀಯ ಬಹುತ್ ಕಿಲಾಡಿ
ಏಕ ಆಂಖೆಸೆ ನೋಡ್ ನೋಡ್ಕಂಡ್
ಹೋಗ್ತಿಯ ತೋಡಾ ಸ್ಮೈಲ್ ಬಿಸಾಡಿ

Friday, 2 December 2011

ನಾನು ರೋಡ್ ಮೇ ಚುಪ್ಕೆ ಜಾತಾ ರಹೆಂಗೆ
ಪೊದೆ ಒಳಗಿಂದ ಏಕ್ ಹಾವು ಬುಸ್ ಬುಸ್ ಸೌಂಡ್ ಕರ್ಕೆ ಆವುಂಗಾ
ಮೆ ಕಲ್ಲು ತಗಂಡ್ ಜೋರ್ ಸೆ ಮಾರೇಗ
ವೋ ಹಾವು ಬೀ ಮೇರೆ ಕೋ ಫಿರ್ ಬುಸ್ ಬುಸ್ ಕರೇಂಗ
ಆಮೇಲೆ ಮೆ ಹೆದರ್ಕೊಂಡು ಘರ್ ಕಡೆಗೆ ಚಲೇ ಜಾಯಂಗಾ ..



ನನ್ ಹೃದಯ ತುಮಾರ ಹತ್ರ ಹೈ
ನಿನ್ ಹೃದಯ ಹಮಾರ ಹತ್ರ ಹೈ
ಈಗ ತುಮ್ ನಮ್ ಪಾಸ್ ಬಂದ್ರೆ
ಹೃದಯಗಳನ ಫಿರ್ ವಾಪಸ್ ಲೇಕೆಂಗೆ ಹಮ್
ಕ್ಯಾ ಹೇಳ್ತಿಯ ಮೇರ ಮಾತಿಗೆ ಜಾನಂ

ಸುಮ್ನೆ ತಮಾಷೆಗೆ ಬರೆದದ್ದು

ಜಾನಂ ಏಕಿ ರೋಡ್ ಮೆ ಹೈ ನಮ್ಮನೆ  ನಿಮ್ಮನೆ
ಅದರೂ ಪೀಚೆ ರೋಡ್ ಮೆ ಓಡಾಡ್ತಿಯ ಸುಮ್ನೆ
ಏಕ ಬಾರ್ ಆವೋ  ಹಮಾರ ಮನೆ ಮುಂದೆ 
ಆಮೇಲೆ ಕಳ್ಳನ ತರ ಆವುಂಗಾ  ನಾನು ನಿನ್ನಿಂದೇ
ತೋಡಾ ದೂರ್ ಹೋಗ್ತಾ ಹೋಗ್ತಾ ಹಂಗೆ
ತುಮಾರ ಕೈ ಹಿಡ್ಕೊಂಡು ಹೇಳ್ತೀನಿ ನಿಂಗೆ
ಅರೆ ಹುಡುಗಿ ತು ಮೇರೆ ದಿಲ್ ಕ ಚೋರಿ ಕರ್ ದಿಯಾ
ನಿನ್ನ  ನೋಡಿದ್ಮೇಲೆ ಮೆ ಪೂರಾ ಪಾಗಲ್ ಹೋಗಯ
ತುಮಾರಿ ಬೀ ಅದನ್ನೇ ಹೇಳ್ಬಿಟ್ರೆ ! ಯಾ ಅಲ್ಲಾ
ಮೇರ ಬಾಯಿಗೆ ಬಂದು ಬಿದ್ದಂಗೆ ರಸಗುಲ್ಲ ...

Tuesday, 29 November 2011

ಹಂ ತುಂ ಒಂದಾದ ಮೇಲೂ
ಏಕ್ ಮುತ್ತು ಬೀ ತುಂ ನಹಿ ದಿಯಾ
ಇವತ್ ದಿಯಾ ನಾಳೆ ದಿಯಾ ಅಂತ
ಕಿತನಾ ಬಾರಿ ಮೇರೆ ಕೋ ಕಾಗೆ ಹಾರಿಸ್ತಿಯಾ
ತುಂ ಹಿಂಗೆ ಚುಪ್ಕೆ ಚುಪ್ಕೆ ಜೂಟ್ ಬೋಲ್ತಿದ್ರೆ
ಮೆ ಬೇರೆ ಲಡ್ಕಿ ಗೆ ಪ್ಯಾರ್ ಕರೂಂಗಾ ಅಷ್ಟೆಯಾ

Monday, 28 November 2011

ಸುಮ್ಮನೆ ಬೀಸುವ
ತಂಗಾಳಿಗೆ ಯಾವುದೋ ಹಠ
ಮರೆತ ಮಾತನು
ಮನದಂಗಳಕೆ ತಂದು
ಮನ ನೋಯಿಸುವ ಚಟ

Friday, 25 November 2011

ಮನಸು ಮುರಿದ
ನಿನ್ನ
ಮಧುರ ಮಾತುಗಳಿಂದ
ಶಿಥಿಲಗೊಂಡ

ನನ್ನಂತರಂಗದ
ಕೊಳದಿ
ತೇಲುತಿವೆ
ನಿನ್ನ ನೆನಪುಗಳು
ದಿಕ್ಕಿಲ್ಲದ
ಹೆಣಗಳು ಗಂಗೆಯಲಿ
ತೇಲಿದಂತೆ ..

Wednesday, 16 November 2011

ಪ್ರೀತಿ

ಹೆಪ್ಪುಗಟ್ಟಿದ
ಮೋಡ
ಮಳೆಯಾಗಿ
ಸುರಿದು
ಭೂಮಿ
ಹಸಿರಾದ ರೀತಿ

ರಾತ್ರಿಯ
ನೀರವ ಮೌನದಲ್ಲಿ
ನಿನ್ನ ನೆನಪುಗಳ ಸಂತೆ
ಕನಸುಗಳಿಗೆ ಕೊಳ್ಳಿಯಿಟ್ಟು
ಹೃದಯ ಚೂರಾಗಿಸಿದರೂ
ನನಗೆ ನಿನ್ನದೇ ಚಿಂತೆ ..
ನಿನ್ನ
ನೆನಪಿನ
ವಿರಹದುರಿಯಲ್ಲಿ
ಬೆಂದ ನಾನು
ನೀರಿಲ್ಲದೆ
ಒದ್ದಾಡುವ ಮೀನು
ನಿನ್ನೊಂದಿಗೆ
ಕಳೆದ ಸವಿಕ್ಷಣಗಳು
ನೆನಪುಗಳಾಗಿ
ಅಲೆಯುತಿವೆ
ನೀನೆ ಕೆಡವಿದ
ನಮ್ಮ ಒಲವ
ಮಹಲಿನ ಸುತ್ತ ..

Tuesday, 15 November 2011

ನನಗೆ
ದುಖಃವಾಗಿದ್ದು
ನೀನು ನನ್ನ
ಬಿಟ್ಟು ಹೋದದ್ದಕ್ಕಲ್ಲ
ನನ್ನ
ಕಳೆದುಕೊಂಡಿದ್ದಕ್ಕೆ ..

Saturday, 12 November 2011

ಸುಮ್ಮನಿದ್ದು
ಬಿಡು ಮನವೇ
ನನ್ನೆದೆಯ
ತಿಳಿಗೊಳದಿ
ಅವಳ
ನೆನಪುಗಳ ತೇಲಿ ಬಿಟ್ಟು
ರಾಡಿಯೆಬ್ಬಿಸದಿರು
ಹೊಸದೊಂದು
ಮೊಗ್ಗು ನನ್ನೊಳಗೆ
ಹೂವಾಗುವ ಪುಳಕ
ಮತ್ತೆ
ಆಟ
ಕೆಡಿಸದಿರು...
ನಿನ್ನಲ್ಲಿ
ನಾನಿಲ್ಲ
ಹಾಗಾಗಿ
ನೀ ಮುಡಿವ
ಮಲ್ಲಿಗೆಗೂ
ಘಮವಿಲ್ಲ ....

Friday, 11 November 2011

ನಿನ್ನ
ನೆನಪಿಗೂ
ನನ್ನ
ಕಣ್ಣೀರಿಗೂ
ಎಂಥ ಗೆಳೆತನ
ಒಂದನ್ನೊಂದು
ಅಗಲುವುದೇ ಇಲ್ಲ

Thursday, 10 November 2011

ಸಾಕು
ಕರುಳ ಬಗೆಯುವ
ಕ್ರೌರ್ಯಕ್ಕೆ
ಹುಸಿನಗೆಯ
ಮುಲಾಮು ಹಚ್ಚಿ
ನಾವೆಲ್ಲಾ ಒಂದೇ ಎಂದಿದ್ದು
ಒಳಗೂ ಹೊರಗೂ
ಇರಿಯುವ
ಕತ್ತಲಲಿ ಭರವಸೆಯ
ಬೆಳಕಿಗಾಗಿ ನಾವು
ಕಣ್ಣನ್ನೇ ಕುರುಡಾಗಿಸಿಕೊಂಡವರು
ಚೂರಿಯ ತುದಿಗೆ
ನೀವು ನಮ್ಮವರೇ ಎಂಬ
ನಂಬಿಕೆಯ ವಿಷ ತುಂಬಿ
ತಣ್ಣಗೆ
ಕೊಂದವರು ನೀವು
ಆದರೂ
ನಮ್ಮ ಗುಟುಕು ಜೀವದೊಳಗಿನ
ಹುಂಬ ವಿಶ್ವಾಸ
ಕೃಶಗೊಂಡ ರಟ್ಟೆಗಳಿಗಿರುವ
ಮೇಲೇಳುವ ತಾಕತ್ತು
ಇನ್ನು ಉಸಿರಾಡುವಂತೆ
ನೋಡಿಕೊಳ್ಳುತಿದೆ...

Tuesday, 8 November 2011

ನಿನ್ನ
ಒಲವಿನ
ರಕ್ಷೆಯಲಿ
ನನ್ನ ಕನಸುಗಳ
ಅನಾವರಣ
ಅವು ನಿಜವಾಗುವ
ಮೊದಲೇ ಕಕ್ಷೆ
ಬದಲಿಸಿದೆ
ವಿನಾಕಾರಣ .

ನಿನ್ನ
ನೆನಪೆಂದರೆ
ಹಗಲು ನುಂಗಿದ
ಇರುಳಿನಲಿ
ದುಃಸ್ವಪ್ನಗಳ
ಸಾಲು ದೀಪ
ಹಚ್ಚಿಟ್ಟಂತೆ

Monday, 7 November 2011


ನೀನು
ನಿಜವಾಗದ
ಕನಸೆಂದು
ನನ್ನ ಮನಸಿಗೆ  ಗೊತ್ತಿದೆ
ಕನಸಿನಲ್ಲಾದರೂ
ನಿಜವಾಗಲಿ ಎಂದು
ಅದು ಕಾಯ್ತಿದೆ ..
ಪ್ರೀತಿ

ಮುಂಜಾನೆಯ
ಎಳೆ ಬಿಸಿಲ
ಸ್ಪರ್ಶಕ್ಕೆ
ಮಂಜು ಕರಗಿ
ನೀರಾದ ರೀತಿ
ನಿನ್ನೊಲವ
ಚಿಲುಮೆ ಬತ್ತಿ
ನನ್ನೆದೆಯ
ಹೊಲವೀಗ
ಬರಡು ಬರಡು ..
ನಿನ್ನೆಲ್ಲ
ಒಲವು
ಮಳೆಯಾಗಿ
ಸುರಿದು
ಬರಡಾದ
ಹೃದಯದಲಿ
ಹಸಿರು
ಚಿಗುರಿಸಲಿ ...
ನನ್ನ
ಬದುಕಿನ
ಕತ್ತಲ ದಾರಿಗೆ
ನಿನ್ನ ನಗೆಯೇ
ಬೆಳದಿಂಗಳು
ಹೊಳೆವ
ಬೆಳಕನು ಕಂಡು
ನಾಚಬೇಕು
ಆ ಚಂದ್ರನು ..
..

Sunday, 30 October 2011

ಅಲೆದದ್ದು ಸಾಕು
ಬಿಕನಾಸಿಯಂತೆ
ಪಕ್ಕಕ್ಕೆ ಒಬ್ಬಳು ಬರಲಿ
ಎಂದರು ಮನೆಯವರು
ದಿಕ್ಕಿಲ್ಲದ ಮನೆ ಹುಡುಗಿ
ಸುರ ಸುಂದರಿ
ಹುಡುಗ ಹೇಗೆ ?
ಕೇಳಲಿಲ್ಲ ಅವರು
ಇವರು ಹೇಳಲಿಲ್ಲ
ಕೆಲಸ
ಜಾಸ್ತಿ ಅವನಿಗೆ
ಬಾರು ,ಪಬ್ಬು ,ಸಿಗರೇಟು
ಇಸ್ಪೀಟು ಅಡ್ದೆಯಲಿ
ಥೇಟ್ ಧರ್ಮರಾಯ
ಅದರೂ ನಮ್ಮ ಹುಡುಗ
ಪುಟಕ್ಕಿಟ್ಟ ಚಿನ್ನ
(ಸ್ವಗತ) ಒತ್ತೆಯಿಟ್ಟ ಚಿನ್ನ
ಇನ್ನು ಬಿಡಿಸಿಕೊಂಡಿಲ್ಲ
ಒಳಮನೆಯಲ್ಲಿ
ಹುಡುಗಿ
ಕಣ್ಣೀರಿಡುತ್ತಿದೆ
ಪಡಸಾಲೆಯ ಮಂದಿಗೆ
ಮುಖವಿಲ್ಲ
ಸುಮ್ಮನೆ ಬಿಂಕದ ಮಾತು
ಇಲ್ಲೇನು ಕಡಿಮೆ ನಿನಗೆ
ಎಲ್ಲವು ಇದೆ
ಬೇಕಾದ್ದು ಬಿಟ್ಟು
ತುಟಿಗೆ ಬಂದ ಮಾತು
ಗಂಟಲಲ್ಲೇ ಉಳಿಯುತ್ತದೆ
ಈಗೀಗ
ಹುಡುಗಿ ನಗುವುದನ್ನು
ರೂಡಿ ಮಾಡಿಕೊಂಡಿದೆ
ಲೋಕದ ಕಣ್ಣಿಗೆ ಮಾತ್ರ
ದೊಡ್ಡವರ ಮನೆ ಜನ
ಅವಳ ಕಣ್ಣೀರನ್ನು
ಪ್ರತಿಷ್ಠೆಯ ಮುಖವಾಡದ
ಹಿಂದೆ ಬಚ್ಚಿಡಲಾಗಿದೆ
ಅವಳ
ಪ್ರಶ್ನೆಗಳಿಗೆ
ಅವನಲ್ಲಿ ಉತ್ತರವಿಲ್ಲ
ಅವಳ
ಮೌನ ಮತ್ತು ನಗುವನ್ನು
ಎದುರಿಸಲು ದೈರ್ಯವು ಇಲ್ಲ
.

ಬೆಂಗಳೂರು

ಇಲ್ಲಿ
ಬದುಕು ದುಬಾರಿ
ಸಾವು ಬಿಕಾರಿ

Friday, 28 October 2011

ನೀನೆ
ತುಂಬಿರುವ ಮನಸಿಗೆ
ತಿವಿಯಬೇಡ ಗೆಳತಿ
ನಿನ್ನ ಮೌನದ ಈಟಿಯಿಂದ
ನಿನ್ನ
ಮೃದು ಮಧುರ
ನೆನಪುಗಳಿಗೆ ನೋವಾಗಿ
ಹೊರಟು ಬಿಟ್ಟಾವು  ಅಲ್ಲಿಂದ ...

ನಾನು ಮರ
ನೀನು ಬಳ್ಳಿ
ಹಬ್ಬಿದಷ್ಟು ಎತ್ತರ
ತಬ್ಬಿದಷ್ಟು ಮಧುರ
ಅದರೂ ....
ನಮ್ಮ ನಡುವೆ

ಕಿ
ಷ್ಟು
ಅಂತರ ...?
ಕಣ್ಣಲ್ಲಿ
ಇರಿಯುವುದಿಲ್ಲ
ಮಾತಲ್ಲಿ
ತಿವಿಯುವುದಿಲ್ಲ
ಎದುರಾದಾಗಲೆಲ್ಲ
ಸುಮ್ಮನೆ
ನಗುತ್ತಾಳೆ
ಕೊಲ್ಲುವ ಕಲೆ
ಅವಳಿಗೆ ಕರಗತ

Monday, 24 October 2011

ಅವಳ
ಉಸಿರಲ್ಲಿ
ಬೆರೆತು
ಹೋಗಬೇಕೆಂದುಕೊಂಡೆ
ವಿಷವನ್ನೇ
ಉಸಿರಾಡಿದಳು
ಅವಳ
ಮಡಿಲಲ್ಲಿ
ಮಗುವಾಗಬೇಕೆಂದುಕೊಂಡೆ
ಉಸಿರನ್ನೇ
ನಿಲ್ಲಿಸಿ ಬಿಟ್ಟಳು
ಚೂರಾದ ಹಾಳೆ
ಆರಿದ ಸಿಗರೇಟು
ಹರಿದ ಚಪ್ಪಲಿ
ಮತ್ತು
ಕಣ್ಣಿನಲಿ ನಿನ್ನ ನಿಶೆ
ನಾನು ನಿಜಕ್ಕೂ
ಸುಖಿ ...
ಹೂವಿಗೇನು ಗೊತ್ತು
ದೇವರ
ತಲೆಯ ಮೇಲೋ
ಹೆಣದ
ಎದೆಯ ಮೇಲೋ
ಅದು
ಎತ್ತಿಕೊಂಡವರ
ಚಿತ್ತ
ನೆರಳಲ್ಲಿ ಮುದುಡುತ್ತದೆ
ಬಿಸಿಲಲ್ಲಿ ಬಾಡುತ್ತದೆ
ತಲೆಯ ಮೇಲಿಟ್ಟರೆ
ಭಕ್ತಿ ಮತ್ತು ಸಂತೋಷ
ಎದೆಯ ಮೇಲಿಟ್ಟರೆ
ದುಃಖ ಮತ್ತು ಕಣ್ಣೀರು

Tuesday, 18 October 2011

ನನ್
ಹೃದಯದಲ್ಲಿ
ಜಾಗ ಖಾಲಿ ಇದೆ
ಅಂತ ಇದುವರೆಗೂ
ಯಾವ್ ಹುಡ್ಗಿನೂ
ಜಾಹಿರಾತು ಕೊಟ್ಟಿಲ್ಲ

ಹಾಗಂತ
ಯಾವ್ ಹುಡುಗರೂ
ಹುಡುಗೀರ
ಅಪ್ಪಣೆ ಕೇಳಿ
ಅವರ ಹೃದಯದೊಳಗೆ
ಪ್ರವೇಶ ಮಾಡಿಲ್ಲ...
ಬದುಕು
ಯಾರೋ
ಬಿಸಾಕಿದ ದಾರಿ
ಸುಮ್ಮನೆ ನಡೆಯಬೇಕು
ಗುರುವು ಬೇಡ ,ಗುರಿಯೂ ಬೇಡ
ದೇಹ
ಚಲಿಸುತ್ತಿದೆ
ಅದಷ್ಟೇ ಸತ್ಯ
ಮತ್ತೆ ಅದರೊಳಗಿನ ಆತ್ಮ ?
ಸಂತೆಯೊಳಗೆ
ಮೌನ ಹುಡುಕಿದಂತೆ
ಎಡವಿದ್ದಕ್ಕೆ ರಕ್ತದ
ಸಾಕ್ಷಿಯಿದೆ
ಮತ್ತೆ ಎದ್ದಿದ್ದಕ್ಕೆ
ಅರ್ಧ ದಾರಿ ಸವೆದಿದೆ
ಗೆದ್ದಿದ್ದಕ್ಕೆ
ರೆಕ್ಕೆಯೇನು ಬಂದಿಲ್ಲ
ಸೋತಿದ್ದಕ್ಕೆ
ನನ್ನಲ್ಲಿ ನೆಪವಿಲ್ಲ ...

Tuesday, 4 October 2011

ಒಹ್ ದೇವ್ರೇ ..................!!!11

   
ದೇವ್ರು ಅಂತ ಯಾಕೆ ನಿಂಗೆ ಕೈಯ ಮುಗಿಬೇಕು
ಏನು ಕಿಸ್ದಿದ್ದೀ ಅಂತ ಆರತಿ ಬೆಳಗಬೇಕು
ಇರೋ ಕಷ್ಟ ಇದ್ದೆ ಇದೆ ,ನಮಗೇನ ಹೊಸದಲ್ಲ
ನೋಡ್ಕಂಡ್ ಸುಮ್ನೆ ಕುಂತ್ಕಂಡಿದ್ದೀ ,ನಿಂಗೆ ಕಣ್ಣಿಲ್ಲ
ನೀನು ಬರಿ ಕಲ್ಲು ಅಂತ ತಿಳಿದೋರ್ ಹೇಳ್ತಾರೆ
ಅದರೂ ಜನ ಕಷ್ಟ ಅಂದ್ರೆ, ನಿಂಗೆ ಅಡ್ಡ ಬೀಳ್ತಾರೆ
ಜಾತಿಗೊಂದು ಮಟ ಮಾಡಿ ನಿನ್ ದಯೆ ಅಂತಾರೆ
ಧರ್ಮಕ್ಕಿಷ್ಟು ವಿಷ ಬೆರಸಿ ,ಜನಗಳ್ ನೆತ್ತಿ ಸವರ್ತಾರೆ
ಅನ್ನ ಕೊಡೋನ ಬಾಯಿಗೆ ಹಿಡಿ ಮಣ್ಣು ಹಾಕ್ತಾರೆ
ಅವನ ಎದೆ ಮೇಲೆ ರಸ್ತೆ
ಮಾಡಿ ನೈಸು ಅಂತಾರೆ
ಒಳಗೊಳಗೆ ದುಷ್ಟರ ಜೊತೆ ಶಾಮೀಲ್ ಆಗ್ಬಿಟ್ಯ
ಪರ್ಸ0ಟೇಜು ಲೆಕ್ಕದಲ್ಲಿ ನೀನು ಡೀಲಿಗ್ ಕುಂತಬಿಟ್ಯ

ಈ ಹಲ್ಕಟ್ ಮಂದಿ ಜೊತೆ ಸೇರಿ ಹಾಳಾಗ್ ಹೋಗ್ಬಿಟ್ಟೆ
ಗ್ರಾನೈಟ್ ಹಾಸಿದ್ ನೆಲದ ಮೇಲೆ ನಿಂತ್ಕಂಡ್ ಹೈಟೆಕ್ ಆಗ್ಬಿಟ್ಟೆ
ಹಿಂಗೆ ಮಾಡ್ತಾ ಹೋದ್ರೆ ನಿಂಗೆ ಕಷ್ಟ ಆಗ್ತದೆ
ಬಡವರ ಸಿಟ್ಟು ರಟ್ಟೆಗೆ ಬಂದ್ರೆ ನಿನ್ ಮಾನ ಹೋಯ್ತದೆ

ಛಿ ಥೂ ಅನ್ನೋಕ್ ಮುಂಚೆ ಒಳ್ಳೆರ್ಗೆ ಒಳ್ಳೇದ್ ಮಾಡ್ಬಿಡು
ಕೆಟ್ಟವರಿಗೆ ಒಂದ್ ದಾರಿ ತೋರ್ಸಿ ದೇವ್ರೇ ಆಗ್ಬಿಡು

Monday, 3 October 2011

ನಿನ್
ಪ್ರೀತಿನ
ಒಂಚೂರು
ಸಾಲ ಕೊಡೆ
ಬೇಕಾದ್ರೆ ...
ನನ್ನ ಹೃದಯಾನ
ಅಡ
ಇಟ್ಕೊಂಡ್ ಬಿಡೆ

Saturday, 1 October 2011

ಜಗತ್ತಿನ
ಎಲ್ಲ ಸುಖಾನೂ
ತಂದು
ನಿನ್ನ ಮುಂದೆ
ಸುರಿತೀನಿ ಅಂತ
ಅಂಗೈಯಲ್ಲಿ
ಆಕಾಶ ತೋರಿಸಲ್ಲ ಕಣೇ
ನಾನೇ
ನಿನ್ನ ಜಗತ್ತಾಗಿರುವಾಗ
ಬೇರೆಲ್ಲ
ಬರೀ ಸುಳ್ಳು ಕಣೇ

Friday, 30 September 2011

ಹಾಗೆ ಸುಮ್ಮನೆ ಹೊಳೆದದ್ದು !!

ಹುಡುಗಿಯರ ಬಹು ದೊಡ್ಡ ಶಕ್ತಿಯೆಂದರೆ ಮುಗುಳ್ನಗೆ ಮತ್ತು ಕಣ್ಣೀರು ...
ಕಾದು
ಕನಲಿದ
ನಿನ್ನೊಳಗೆ
ಹನಿ ಹನಿಯಾಗಿ
ಇಳಿದ 
ಮಳೆ ನಾನು
ಎಷ್ಟು
ಸುರಿದರೂ
ತಂಪಾಗದ
ಅತೃಪ್ತ
ಭುವಿ ನೀನು

ಬೆಚ್ಚನೆಯ ಒಲವಿಲ್ಲ
ಅಪ್ಪುಗೆಯ ಬಲವಿಲ್ಲ
ನನ್ನ ನಿನ್ನ ನಡುವೆ
ಆದರೂ
ನಿನ್ನ ಬಿಡೆನು
ಕಾರಣ
ನಿನ್ನ ' ನಡು' ವೆ
ನನ್ನ
ಚಿತ್ತ ಭಿತ್ತಿಯ ತುಂಬೆಲ್ಲ
ನಿನ್ನದೇ
ನೆನಪುಗಳು ಚಿನ್ನಾ
ಅಳಿಸಿಬಿಡು
ಅವುಗಳನ್ನು
ನಾ ಅಳಿಯುವ ಮುನ್ನಾ
ಮದನ
ಮದನಿಕೆಯರ
ಮುಗಿಯದ ಕದನ
ಯಾರಾದ್ರೂ
ನೋಡೋಕೆ ಮುನ್ನ
ಹಾಕಿಕೊಳ್ಳಲಿ
ಅವರ ಕೋಣೆ 'ಕದ'ನ

Saturday, 17 September 2011

ಹುಡುಗಿ

ಮೊನ್ನೆ ಸಂಕ್ರಾತಿ ಹಬ್ಬದ ದಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತು ಗಾಳಿಗೆ ಹಾರಿ ಹಾರಿ ನಿನ್ನ ಕೆನ್ನೆಗೆ ಮುತ್ತಿಕ್ಕುತ್ತಿದ್ದ ಕೂದಲನ್ನು ಪದೇ ಪದೇ 
ಹಿಂದಕ್ಕೆ ಸರಿಸುತ್ತಿದ್ದಾಗಲೇ ನಿನ್ನನ್ನು ನಾನು ನೋಡಿದ್ದು .ಮರುಕ್ಷಣವೇ ನನ್ನ ಮನಸಿನ ಮನೆಯ ತುಂಬೆಲ್ಲ ಒಲವ ಶ್ರಾವಣದ ಸಂಭ್ರಮ ಶುರುವಾಗಿ ಹೋಗಿತ್ತು .
 ಹನುಮಂತನ ಬಾಲದಂತಿದ್ದ ಕ್ಯೂ ಬಿಸಿಲಲ್ಲಿ ಬೆವರಿಳಿಸುತ್ತಿದ್ದರೆ ದೇವರ ದರ್ಶನ ಬೇಡ ಎನಿಸುತ್ತಿತ್ತು .ಇನ್ನೊಂದಿಷ್ಟು ಹೊತ್ತು ನೋಡಿ ಮನೆಗೆ ಹೊರಟು ಬಿಡೋಣ
ಅಂದುಕೊಳ್ಳುತ್ತಿದ್ದವನ ಮುಂದೆ ಜಗತ್ತಿನ ಸೌಂದರ್ಯವೆಲ್ಲ ಹೆಣ್ಣಾಗಿ ರೂಪ ಪಡೆದಿದೆಯೇನೋ ಎಂಬಂತೆ ನೀನು ಕಾಣಿಸಿಕೊಂಡೆ , ಆಮೇಲೆ ನಾನು ನಾನಾಗಿ ಉಳಿಯಲಿಲ್ಲ .ಗರಿಗೆದರಿದ
ಹಕ್ಕಿಯಂತಾಗಿ ಹೋಗಿದ್ದ ಮನಸಿನಲ್ಲಿ ನಿನ್ನ ಬಗೆಗಿನ ನೂರು ಭಾವನೆಗಳ ಸಂಕಲನ ,ಖಾಲಿ ಇದ್ದ ಎದೆಯ ತುಂಬಾ ಸಿಹಿ ಸಿಹಿ ಕನಸುಗಳ ವರ್ಣ ಸಂಕ್ರಮಣ .
ತುಸು ತುಸುವೇ ಕಮ್ಮಿಯಾಗುತ್ತಿದ್ದ ಕ್ಯೂ ಬ್ರೆಗನೆ ಮುಗಿದು ಹೋಗುವುದೇನೋ ಎಂಬ ಬೇಸರದಲ್ಲಿ ನಿನ್ನನ್ನು
ದಿಟ್ಟಿಸುತ್ತಿದ್ದ ನನ್ನನ್ನು ಒಮ್ಮೆ ನೋಡಿದೆಯಲ್ಲ  ! ನಿಜ ಹೇಳಲಾ ಹುಡುಗಿ
ಸಾವಿರ ಕೋಲ್ಮಿಂಚು ಒಮ್ಮೆಗೆ ಹೊಡೆದಂತಾಯ್ತು .
ಅಮಾವಾಸ್ಯೆಯ ಕತ್ತಲಲ್ಲಿ ಬೆಳದಿಂಗಳು ಸುರಿದಂತೆ ನಿನ್ನ ನಗುವಿಗೆ ಯಾರನ್ನು ಬೇಕಾದರೂ ಮೋಡಿ ಮಾಡಿ ಚಿತ್ತಾಗಿಸುವ ಶಕ್ತಿಯಿದೆ ಅನ್ನಿಸುತ್ತಿತ್ತು ,ಆದರೆ ಬೇರೆ ಯಾರು  ಆ ನಗುವಿಗೆ ತುತ್ತಾಗದಿರಲಿ ಎಂದು ಮನಸ್ಸು ದೇವರಲ್ಲಿ ಬೇಡಿಕೊಳ್ಳುತ್ತಿತ್ತು .ದೇವರ ದರ್ಶನ ಮುಗಿಸಿಕೊಂಡು ಹೊರಬಂದವನ ಕಣ್ಣುಗಳು ನಿನ್ನ ಅರಸುತ್ತಿದ್ದರೆ ನೀನಾಗಲೇ ನಿನ್ನ ನೀಲಿ ನೀಲಿ ಸ್ಕೂಟಿಯ ಕಿವಿ ಹಿಂಡುತ್ತಿದ್ದೆ.ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಾನು ನಿನ್ನ ಎದುರಿಗಿದ್ದೆ ,ಗಾಬರಿಯಾದ ನಿನ್ನ ಕಂಗಳಲ್ಲಿ ಯಾರೀತ ಎಂಬ ಆತಂಕ ಪ್ರತಿಫಲಿಸುತ್ತಿತ್ತು .ಒಂದೇ ಉಸಿರಿನಲ್ಲಿ ನನ್ನ ಪರಿಚಯ ,ಊರು ,ಕೆಲಸ ,ಅಭ್ಯಾಸ, ಹವ್ಯಾಸ ಎಲ್ಲವನ್ನು ಹೇಳಿಕೊಂಡೆ .ಕಣ್ಣು ಮಿಟುಕಿಸದೆ ಕೇಳಿಸಿಕೊಂಡ ನೀನು' ಓಕೆ  ' ಆದರೆ ಇದನ್ನೆಲ್ಲಾ ನನ್ನ
ಹತ್ತಿರ ಯಾಕೆ ಹೇಳುತ್ತಿದ್ದೀರಾ? ಅಂತಂದೆ .
ಮಾಮರ ಚಿಗುರಿದ ಸಂಭ್ರಮದಲ್ಲಿ ಕೋಗಿಲೆಯೊಂದು ಖುಷಿಯಿಂದ ಮಾತನಾಡಿದಂತಿತ್ತು ನಿನ್ನ ದನಿ.ಇನ್ನೇನು ಹೊರಡಬೇಕೆಂಬ ಅವಸರದಲ್ಲಿದ್ದ ನಿನಗೆ ಕೈಗೆ ಸಿಕ್ಕ ಹಾಳೆಯ ಚೂರೊಂದರಲ್ಲಿ ನನ್ನ ಮೊಬೈಲ್ ನಂ ಬರೆದು ದಯವಿಟ್ಟು ಕರೆ ಮಾಡಿ ,ನಿಮ್ಮ ಕಾಲ್ ಗಾಗಿ ಕಾಯುತ್ತಿರುತ್ತೇನೆ ಅಂತ್ಹೇಳಿ ಹಾಳೆಯ ಚೂರನ್ನು ನಿನ್ನ ಕೈಗಿಟ್ಟೆ.ಬಹುಶ ನನ್ನನ್ನು ನೀನು ಎಲ್ಲೋ ತಲೆ ಕೆಟ್ಟವನಿರಬೇಕು ಎಂದು
ಕೊಂಡಿರಬೇಕು . ನಿಜ ನಂಗೆ ತಲೆ ಕೆಟ್ಟಿರಲಿಲ್ಲ,ಮನಸು ಕೆಟ್ಟಿತ್ತು ,ಅದು ನೀನೆ ಬೇಕು ಎಂದು ತೀರ್ಮಾನಿಸಿಯಾಗಿತ್ತು .
ನೀನು ಕಾಲ್ ಮಾಡೇ ಮಾಡ್ತಿಯ ಅಂತ ನನ್ನ ಮನಸು ಹೇಳುತ್ತಿತ್ತು,ಅಥವಾ ಹಾಗೆನಿಸುತ್ತಿತ್ತು .ಕ್ಷಣಗಳು ದಿನವಾದಂತೆ ,ದಿನಗಳು ಯುಗವಾದಂತೆ ಭಾಸವಾಗುತಿತ್ತು .ನಿನ್ನ ಪ್ರೀತಿಯ ಕರೆಗಾಗಿ ಕಾದು ಕಾದು ಸೀದುಹೋದೆ ಗೆಳತಿ ,ರಾಮನಿಗೆ ಶಬರಿ ಕಾದಂತೆ .ಅಲ್ಲಿ ಶಬರಿಗೆ ರಾಮ ಬರುವನೆಂಬ ನಂಬಿಕೆಯಾದರು ಇತ್ತು ,ಆದರೆ ಅಂತ ನೀರಿಕ್ಷೆಗಳು ನಿನ್ನ ಬಗ್ಗೆಯೂ ಇತ್ತ ? ಇಲ್ಲ ಖಂಡಿತ ಇರಲಿಲ್ಲ .ಆಗಷ್ಟೆ ನೋಡಿ ,ಕ್ಷಣದಲ್ಲಿ ಪ್ರೀತಿ ಹುಟ್ಟಿ ತಕ್ಷಣವೇ ಮೊಬೈಲ್ ನಂ  ಕೊಟ್ಟು ಕರೆ ಮಾಡಿ ಅಂದವನ ಮನಸ್ಥಿತಿ  ನೋಡಿ ನೀನು ಕೇವಲ ನಕ್ಕಿರಬೇಕು ,ಕೊನೆ ಕೊನೆಗೆ ನನಗೆ ಹಾಗೆನಿಸುತ್ತಿತ್ತು .ಆದರೆ ಹುಡುಗಿ ಪ್ರೀತಿಗೆ ಮಾತ್ರ ಇಂಥ ಹುಚ್ಹುಗಳಿರುತ್ತವೆ ಎಂದು ನಂಬಿದವನು ನಾನು .ನನ್ನ ಪಾಲಿಗೆ ನೀನೆಂಬುದು ಇನ್ನು ಕನಸು ಅಂದುಕೊಂಡು ನಿರಾಳವಾಗುತ್ತಿದ್ದವನ ಮನಸು ಮತ್ತೆ ನವಿಲಿನಂತಾಗಿದ್ದು  ನಿನ್ನ ಮೊದಲ ಮೆಸೇಜ್ ಬಂದಾಗ ," ಹೇಗಿದ್ದೀರಿ" ಎಂಬ ಮೆಸೇಜ್ ನೋಡಿ ಅದು ನಿನ್ನದೇ ಇರಬಹುದೇ ಎಂಬ ಆಸೆಯಲ್ಲಿ" ಚನ್ನಾಗಿದ್ದೇನೆ ,ನೀವು ಯಾರು "? ಎಂಬ ನನ್ನ ಪ್ರಶ್ನೆಗೆ  ಆ ಕಡೆಯಿಂದ ಬಂದ ಉತ್ತರ "ಗೆಸ್ಸ್ ಮಾಡಿ ಫ್ರೆಂಡ್ "
ಅದನ್ನು ನೋಡಿದ ಮೇಲೆ ಅದು ನಿನ್ನದೇ ಎಂದು ಗೊತ್ತಾಗಿ ಹೋಯ್ತು .ಆದರೆ ಅದನ್ನು ಹೇಳಿಕೊಳ್ಳದೆ ಪರಸ್ಪರ ತರಲೆ,ಹುಸಿಕೋಪ ,ಎಲ್ಲವು ವಿನಿಮಯವಾಯ್ತು .ಪರಿಚಯದಿಂದ ಸಲುಗೆ ಬೆಳೆಯಿತು .ಸಲುಗೆ ನಮ್ಮಿಬ್ಬರನ್ನು ಮತ್ತೊಮ್ಮೆ ಮುಖಾಮುಖಿಯಾಗಿಸಿತು .ಆಡಿದ ಮಾತುಗಳಿಗೆ ,ಕೇಳಿಸಿಕೊಂಡ ಜೋಕುಗಳಿಗೆ,  ಹಿತವಾಗಿ ಕಾಡಿದ ಹಾಡುಗಳಿಗೆ
ಇಬ್ಬರು ಮನಸಾರೆ ಸೆರೆಯಾದೆವು.ಗಾಂಧಿ ಬಜಾರಿನ ರಸ್ತೆಗಳು ,ಆಶ್ರಮದ ಕಲ್ಲು ಬೆಂಚುಗಳು ,ಎಸ್ ಎಲ್ ವಿ  ಹೋಟೆಲ್ಲಿನ ಟೇಬಲ್ಲುಗಳು ನಮ್ಮ ಓಡಾಟ ,ಒಡನಾಟಕ್ಕೆ
ಸಾಕ್ಷಿಯಾದವು .ಆದರು ನಾವು ಒಬ್ಬರಿಗೊಬ್ಬರು ಇಷ್ಟ ಅಂತ ಹೇಳಿಕೊಳ್ಳಲೇ ಇಲ್ಲ .ಪ್ರೀತಿಯ ಮಾತು ಝರಿಯಾಗಿ ಹರಿಯಲೇ ಇಲ್ಲ .ಜೀವದ ಗೆಳತಿಯಂತಾಗಿ ಹೋಗಿದ್ದ ನೀನು
ದಿನಕ್ಕೊಂದು ಸಲ ಕರೆ ಮಾಡದಿದ್ದರೆ ,ಗಂಟೆಗೊಂದು ಮೆಸೇಜು ಕಲಿಸದಿದ್ದರೆ ,ವಾರಕ್ಕೆರಡು ಸಲ ಕಾಣಿಸದಿದ್ದರೆ ನನ್ನಲ್ಲೊಂದು ಅವ್ಯಕ್ತ ಭಯ ಶುರುವಾಗುತ್ತಿತ್ತು .ವಿನಾಕಾರಣ
ನೀನು ನನ್ನ ಕೈ ತಪ್ಪಿ ಹೋಗಿ ಬಿಡುವೆಯ ಎಂಬ ಆತಂಕ ನನ್ನನ್ನು ಧಾವಂತಕ್ಕೆ ಈಡು ಮಾಡುತ್ತಿತ್ತು .ನೀನಂದ್ರೆ ನಂಗಿಷ್ಟ ಕಣೇ ಅಂತ ಸಾವಿರ ಸಲ ಹೇಳಲು ಬಂದವನಿಗೆ
ನಿನ್ನ ಮುಖ ನೋಡಿದಾಕ್ಷಣ ನಾಲಿಗೆ ಹೊರಳುತ್ತಿರಲಿಲ್ಲ .ಅಪ್ಯಾಯಮಾನ ಗೆಳೆತನದ ಖುಷಿ ಹಾಳಾಗಿ ಹೋಗಬಹುದೆನ್ನುವ ದಿಗಿಲು ನನ್ನನ್ನು ಮೂಕನನ್ನಾಗಿಸುತ್ತಿತ್ತು ತಿಳಿಯಲಾರದ ತಳಮಳಗಳು ಮತ್ತು ಮನಸಿನ ಬಗೆಹರಿಯದ ದ್ವಂದ್ವಗಳಿಂದ ಹೊಯ್ದಾಡುತ್ತಿದ್ದ ನನ್ನ ಮನಸಿನ ಮಾತು ನಿನಗೆ
ಅರ್ಥವಾಗುತ್ತಿತ್ತಾ ?
ಮೋಡ ಕಟ್ಟಿ ಇನ್ನೇನು ಮಳೆಯಾಗಬಹುದೆಂಬ ವಾತಾವರಣವಿದ್ದ  ಸಂಜೆಯೊಂದರಲ್ಲಿ ಏಕಾಂತವನ್ನು ಎಂಜಾಯ್ ಮಾಡುತ್ತ ನಡೆಯುತ್ತಿದ್ದವನ ಬೆನ್ನ ಹಿಂದಿನಿಂದ " ಐ ಲವ್ ಯು ಕಣೋ ,ನೀನೆ ಹೇಳ್ತಿಯ ಅಂತ ಕಾಯುತ್ತಿದ್ದೆ .ಮನೆಯಲ್ಲಿ ನನ್ನ ಮದುವೆ ಮಾತುಕತೆ ನಡೆಯುತ್ತಿದೆ ,ನಿನ್ನ ಬಿಟ್ಟು ನನ್ನ ಮನಸಿನಲ್ಲಿ ಇನ್ಯಾರಿಗೂ ಜಾಗವಿಲ್ಲ ಕಣೋ
ನಿನಗೂ ನಾನಂದ್ರೆ ಇಷ್ಟ ಅಲ್ವೇನೋ " ? ಅನ್ನುವ  ಮಾತು ಕೇಳಿ ತಿರುಗಿದೆ ,ಇಬ್ಬರ ಕಣ್ಣಲ್ಲೂ ಮಾತಿಗೆ ನಿಲುಕದ ಸಂಭ್ರಮವಿತ್ತು .ಹಾಗೆ ತಬ್ಬಿಕೊಂಡೆ ,ಸುರಿದ ಮಳೆಗೆ ದೇಹ ಮತ್ತು ಮನಸು ತೊಪ್ಪೆಯಾಗಿ ಹೋಯ್ತು .......

Friday, 16 September 2011

ನಿನ್ನೆಗಳಲ್ಲಿ ಮಲೆತು
ನಾರುತ್ತಿರುವ ಭವಿಷ್ಯದ ನಾಳೆಗಳನ್ನು
ವರ್ತಮಾನಕ್ಕೆ ತರಲು
ಹೆಣಗುತ್ತೇನೆ
 
ಕತ್ತು ತುಳಿದು
ಉಸಿರು ನಿಲ್ಲಿಸುವ
ಹರಾಮಿ ಹುನ್ನಾರಗಳ ಮೀರಿ
ಗರಿಕೆಯಾದರೂ ಸಿಗಲೆಂದು
ಆಸೆಯಿಂದ ಕೈ ಚಾಚುತ್ತೇನೆ
 
ಕಂಡರೂ ಕಾಣದಂತೆ ನಕ್ಕು
ಅಬ್ಬರಿಸುವ ಜೀವರೂಪದ ವಿರೂಪಗಳ
ಕೇಕೆಗೆ ಬೆಚ್ಚಿ ಭಯದಿ ಬಿಕ್ಕುತ್ತೇನೆ
 
ಸಾವಿರ ಸಂಕೋಲೆಗಳ ಬಿಗಿಬಂಧದಲ್ಲಿ
ನರಳುವ ನಿತ್ರಾಣ ದೇಹಕೆ ಕೊಂಚ
ಶಕ್ತಿ ತುಂಬಿ ,ಒಂದಿಷ್ಟು ಬೆಳಕು
ತೋರಿಸುವರಾರು ಎಂದು 
ಬಿದ್ದಲ್ಲೇ  ಬಡಬಡಿಸುತ್ತೇನೆ
 
ಸಂಚು ಹೂಡುವ ವಂಚಕ
ಭೂತಕಾಲದ ಇಕ್ಕಳದಲ್ಲಿ
ಸಿಕ್ಕು ಮತ್ತೆ ಮತ್ತೆ ಸಾಯುತ್ತೇನೆ
ತುಂಬ ಉತ್ಸಾಹ ಮತ್ತು ಲವಲವಿಕೆಯಿಂದಿದ್ದ ಆ ಹುಡುಗ ಇದ್ದಕ್ಕಿದ್ದಂತೆ ಮಂಕಾಗಿ ಹೋದ .
ಗೆಳೆಯರು ಏನಾಯಿತೆಂದು ಕೇಳಿದರು
ಅದಕ್ಕವನು
ಮದುವೆಯಾಯಿತೆಂದ .

ಒಂದು ಸಾಲಿನ ಕಥೆ

ಇವಳಿಂದ ಮುಕ್ತಿ ಬೇಕು ನನಗೆ ,ಇವಳನ್ನು ಮುಗಿಸಿಬಿಡಬೇಕು ಎಂದು ಕೊಳ್ಳುತ್ತಿದ್ದಂತೆ ಹೆಂಡತಿ ಕುಡಿಯಲು ಹಾಲು ತಂದು ಕೊಟ್ಟಳು .ಕುಡಿದವನು ಮತ್ತೆ ಮೇಲೇಳಲಿಲ್ಲ .ಅವನಿಚ್ಹೆಯಂತೆ ಅವಳಿಂದ ಮುಕ್ತಿ ಪಡೆದ.

ಯಾಕೋ ಬೇಜಾರು .........

ಯಾರ ಮುಖವೂ
ಮನಸಲಿ ನಿಲ್ಲುತ್ತಿಲ್ಲ
ಯಾವ ಕನಸು
ಕಣ್ಣಿಗೆ ಹತ್ತುತ್ತಿಲ್ಲ
ಕಡ ತಂದ ಕನಸುಗಳ
ಎದೆಯೊಳಗೆ ಕರೆತರಲು
ಮನಸಿಗೂ
ಮನಸಿಲ್ಲ .....

Tuesday, 13 September 2011

ಕೆಲ
ಸಂಬಂಧಗಳೇ
ಹೀಗೆ
ಜೊತೆಯಲ್ಲೇ
ಸಾಗಿದರೂ
ಜೊತೆಯಾಗದ
ಹಳಿಗಳ ಹಾಗೆ ....

ಕಣ್ಣೀರು

ನಿನ್ನ ಮೋಹದ
ಅಮಲಿನಲ್ಲಿ
ಕನಸು
ಕಳೆದುಕೊಂಡ
ನನ್ನಿಂದ ಬದುಕು
ಕಟ್ಟಿಸಿಕೊಂಡ
ಕಂದಾಯ

Monday, 12 September 2011

ನಿನ್ನ ಬದುಕಲ್ಲಿ
ಬೆಳದಿಂಗಳಾಗಿ
ನಾನೇ ಇರುವಾಗ
ಆಕಾಶದಲ್ಲಿರೋ ಚಂದ್ರನ
ತಂದು
ನಿನ್ನ ಮುಡಿಗೆ ಹೂವಾಗಿಸ್ತಿನಿ
ಅಂತ ಸುಳ್ಳು ಭರವಸೆ
ಕೊಡಲ್ಲ ಕಣೇ.....

Friday, 9 September 2011

ಕನಸಿಗೆ ಬಂದವಳು ಮನಸಿಗೆ ಬರಬಾರದೇ ?

ಗೆಳತಿ
     ಗೆಳೆಯರದೆಲ್ಲ ಒಂದೇ ತಕರಾರು .ಭಾನುವಾರದ ಇಳಿಸಂಜೆಯಲಿ,ಬಿಡುವಿಲ್ಲದೆ ಮಾಡುತಿದ್ದ ಮೆಸೇಜುಗಳಲ್ಲಿ ,ಲೋಕಾಭಿರಾಮವಾಗಿ ಹರಟುತ್ತಿದ್ದ ಫೋನಿನಲಿ ಇ
ಡಿಯಾಗಿ ಸಿಗುತ್ತಿದ್ದ ನಾನು  ಇತ್ತೀಚಿಗೆ ಕೈಗೆ ಸಿಗುತ್ತಿಲ್ಲ ಅಂತ ಅವರಲ್ಲಿ ಕೊಂಚ ಗುಮಾನಿ ಬೆರೆತ ಕೋಪ.ನಿಜ ಹೇಳ್ಬೇಕಂದ್ರೆ ಗೆಳೆಯರಿಗಿಂತ ಮೊದಲು ನನಗೆ ಹಾಗೆನಿಸುತ್ತಿದೆ .ನಿದ್ರೆ ಬರದ ಮುಂಜಾವೊಂದರಲ್ಲಿ ಆವರಿಸಿಕೊಂಡ ಸಣ್ಣ ಮಂಪರಿಗೆ ಹಾಗೆ ಜಾರಿದವನ ಕನಸಿಗೆ ನೀನು ಬಂದು ಹೋದ ಮೇಲೆ ನಾನು ನಾನಾಗಿ ಉಳಿದಿಲ್ಲ .
ಶ್ರಾವಣದ ಮೊದಲ ಮಳೆ ಬಿದ್ದ ಮೇಲೆ ಹೊರಡುವ ಮಣ್ಣ ಘಮದಂತೆ ನನ್ನ ಮೈ ಮನಸಿನ ತುಂಬೆಲ್ಲ ನೀನೆ ತುಂಬಿಕೊಂಡ ಮೇಲೆ ಗೆಳೆಯರೆಲ್ಲ ಹೇಳಿದ "ಏನೋ ಆಗಿದೆ ,ನನಗೇನೋ ಆಗಿದೆ " ಅನ್ನುವ ಮಾತು ನಿಜ ಅನ್ನಿಸತೊದಗಿದ್ದು . ಮೊನ್ನೆ ಮೊನ್ನೆ ತಾನೇ ನೀನು ಗಿರಿನಗರದ ವೆಂಕಟರಮಣ ದೇವಸ್ಥಾನದ ತಿರುವಿನಲ್ಲಿ ನನ್ನ ಮುಂದಿನಿಂದ ಹಾದು ಹೋದೆಯಲ್ಲಾ  ? ಆಗಲೇ ಗೊತ್ತಾಗಿದ್ದು ಕನಸಿಗೆ ಬಂದಿದ್ದು ನೀನೆ ಅಂತ . ಅಮೇಲೆನಿದೆ,ಮನಸೆಲ್ಲ ನಿನ್ನಲ್ಲೇ ನೆಲೆಯಾಯಿತು ,ನಿನ್ನ ಅರಸುವುದೇ ಉದ್ಯೋಗವಾಯಿತು . ಇಡೀ ಗಿರಿನಗರದ ಗಲ್ಲಿ ಗಲ್ಲಿಗಳಲ್ಲಿ ,ಶಾಂತಿಸಾಗರ ಹೋಟೆಲಿನ ಗಜಿ ಬಿಜಿಯಲ್ಲಿ ,ಸೀತಾ
ಸರ್ಕಲ್ ನ ಆಸುಪಾಸಿನಲ್ಲಿ ಎಂದಾದರು ಎದುರಾಗಬಹುದೆಂಬ ಆಸೆಯಲಿ ಕಾದು ಕೆಂಡವಾಗುತ್ತಿದ್ದವನ ಜೊತೆ ನನ್ನ ಪ್ರೀತಿಯ  ಪಲ್ಸರ್ ಬಿಟ್ಟರೆ ಇನ್ಯಾರು ಇರಲಿಲ್ಲ .ಪ್ರೀತಿಯಲ್ಲಿ ಬಿದ್ದವರಿಗೆ ಜಗತಿನ ಪರಿವೆ ಇರುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೆ .ನನ್ನಷ್ಟು ಸುಖಿ ಬೇರೆ ಇಲ್ಲ ಎನಿಸುತ್ತಿತ್ತು .ಮನಸು ನಿನ್ನನ್ನು ಹುಡುಕುವ ಖುಷಿಯನ್ನು ಎಂಜಾಯ್ ಮಾಡುತ್ತಿತ್ತು .ಅದು ನೀನೆ ಬೇಕು ಎನ್ನುವ ಹಟಕ್ಕೆ ಬಿದ್ದಿತ್ತು .
ಅದೊಂದು ಸಂಜೆ ಆಗಷ್ಟೆ ಸೂರ್ಯ ಬೆಟ್ಟಗಳ ನಡುವಿನಿಂದ ಮರೆಯಾಗಿ ,ಕತ್ತಲನ್ನು ಸೀಳಿಕೊಂಡು ಚಂದಿರ ನಗುವ ಹೊತ್ತಿಗೆ ಕಂಡು ಕಾಣದಂತ ತುಂತುರು ಮಳೆ ಶುರುವಾಗಿತ್ತು .ಗೆಳೆಯನೊಬ್ಬನ ಮೊಬೈಲ್ ಕರೆಗೆ ಉತ್ತರಿಸಲು ಬೈಕ್   ಪಕ್ಕಕ್ಕೆ ನಿಲ್ಲಿಸಿ ಮೊಬೈಲ್ ಕೈಗೆತ್ತಿಕೊಂಡು ಹಲೋ ಎಂದು ಹಿಂದಕ್ಕೆ ತಿರುಗಿದೆ , ಜಸ್ಟ್ ಕಣ್ ಕಣ್ಣ ಸಲಿಗೆ ಅಷ್ಟೇ. ಇದೇನು  ಕನಸೋ ಇಲ್ಲ ಭ್ರಮೆಯೋ ಒಂದು ಗೊತ್ತಾಗದ ಅಯೋಮಯ  ಸ್ಥಿತಿಯಲ್ಲಿ  ನಾನಿದ್ದೆ ,ಕಾರಣ ಎದುರಲ್ಲಿ ನೀನಿದ್ದೆ ..
ಹಲೋ ಹಲೋ ಎಂದು ಅತ್ತ ಕಡೆಯಿಂದ ಬಾಯಿ ಬಡಿದುಕೊಳ್ಳುತ್ತಿದ್ದ ಗೆಳೆಯನ ದನಿ ನನಗೆ ಕೇಳಿಸುತ್ತಿರಲಿಲ್ಲ .ಮೊಬೈಲ್ ಜೇಬಿಗೆ ತುರುಕಿದವನೇ ನಿನ್ನ ಪಕ್ಕದಲ್ಲಿ ಬಂದು ನಿಂತೆ .ಮಾತಿಲ್ಲ ಕಥೆಯಿಲ್ಲ .ಆರಂಬವಾದ ಪ್ರೀತಿ ಮುಂದುವರೆಯುವುದಾದರೂ  ಹೇಗೆ  ಎಂಬ ತಳಮಳದಲ್ಲಿ ತಲ್ಲಣಿಸುತ್ತಿದ್ದವನ  ಕೈಗೊಮ್ಮೆ

ನಿನ್ನ ಭುಜ ಅಕಸ್ಮಾತ್ ತಾಗಿದಂತಾಗಿ ನಿನ್ನತ್ತ ತಿರುಗಿದೆ ,ಸಾರಿ ಎಂಬ ಎರಡಕ್ಷರದ ದನಿಯಾ ಮೋಡಿಗೆ ಚಿತ್ತಾಗಿ ಹೋದೆ .ಹಾಗೆ ಸುಮ್ಮನೆ ಕಿರುನಗೆಯೊಂದನ್ನು ಎಸೆದು ಇನ್ನಷ್ಟು  ಹತ್ತಿರಕ್ಕೆ ಸರಿದೆ . ಬಿಗಿಯಾದ ಜೀನ್ಸ್  ಮೇಲೆ ಮರೂನ್ ಕಲರಿನ ಟಾಪ್ ಹಾಕಿಕೊಂಡು ಬೆನ್ನ ಮೇಲೆ ಹರವಿಕೊಂಡ
ರೇಷ್ಮೆಯಂಥ ಕೂದಲು ಮೆಲ್ಲಗೆ ಬೀಸುತ್ತಿದ್ದ ತಂಗಾಳಿಗೆ ಅತ್ತಿತ್ತ ಸರಿದಾಡುತ್ತಿದ್ದರೆ ಮನಸ್ಸು ತನ್ನಷ್ಟಕ್ಕೆ  ತಾನೆ ಹಾಡಲು ಶುರು ಮಾಡಿತ್ತು .ಸಣ್ಣಗೆ ಹನಿಯುತ್ತಿದ್ದ ಮಳೆ ಸ್ವಲ್ಪ ಸ್ವಲ್ಪವೇ ಜೋರಾಗುತ್ತಿದ್ದಂತೆ ನೀನು ಕಾಂಪ್ಲೆಕ್ಸಿನ ಮೆಟ್ಟಿಲುಗಳ ಕಡೆಗೆ  ಹೆಜ್ಜೆ ಇಡತೊಡಗಿದೆ.ಹತ್ತುತ್ತಿದ್ದ ಮೆಟ್ಟಿಲು ಎಡವಿ ತಡವರಿಸುತ್ತಿದ್ದವಳನ್ನು ಹಿಂದೆಯೇ ಇದ್ದ ನಾನು ಕೈ ಕೊಟ್ಟು ಹಿಡಿದುಕೊಂಡೆ .ಒಂದು ಕ್ಷಣ ನರನರವೂ ಕಂಪಿಸಿದಂತಾಯ್ತು ,ಥ್ಯಾಂಕ್ ಯು  ಎಂಬ ಮಾತು ಕೇಳಿ ಬದುಕೇ ಸಾರ್ಥಕವಾದಂತಾಯ್ತು.ತುಂತುರು ಮಳೆಯಲ್ಲಿ ಮಸುಕು ಮಸುಕು ಕತ್ತಲೆಯಲ್ಲಿ ನಾವಿಬ್ಬರು ಪರಿಚಯದ ಗೆಳೆಯ ಗೆಳತಿಯರಂತೆ ಒಂದಿಷ್ಟು ಮಾತಾಡಿಕೊಂಡೆವು .ನನ್ನ ಮನದಿಂಗಿತವನ್ನು ನಿನ್ನ ಮನಸ್ಸಿಗೆ ತಲುಪಿಸುವುದು ಹೇಗೆ ಎಂಬ ಯೋಚನೆಯಲ್ಲಿರುವಾಗಲೇ ಮಳೆ ನಿಂತಿತು ,ಮಾತು ಮುಗಿಯಿತು .

ಮತ್ತೆ ಸಿಗ್ತೀನಿ ಎಂಬ ಭರವಸೆಯನ್ನು ಕಣ್ಣಂಚಲಿ ತುಳುಕಿಸುತ್ತ (ನನಗೆ ಹಾಗೆನಿಸುತ್ತಿತ್ತು )ಬೈ ಎಂದು ಹೇಳಿ ನೀನು ಹೊರತು ಹೋದೆ .
ನಾಳೆ ಶಿವರಾತ್ರಿ ಹಬ್ಬದಂದು ಬಸವನ ಗುಡಿಯಾ ದೊಡ್ಡ ಗಣಪನ ಗುಡಿಗೆ ನೀನು ಬಂದೆ ಬರ್ತಿಯಾ  ಅಂತ ಗೊತ್ತು ,ಅಲ್ಲಿ ನಿನಗಾಗಿ ಬೆಟ್ಟದಷ್ಟು ಪ್ರೀತಿಯನ್ನು ಜೊತೆಯಲ್ಲಿ ಇಟ್ಟುಕೊಂಡು ನೀ ಬರುವ ದಾರಿಯಲಿ ಕಾಯ್ತಿರ್ತೀನಿ .ಕನಸಿಗೆ ಬಂದವಳು ನೀನು ,ಮನಸಿಗೂ ಬಂದು ಬಿಡು .ಹಾಗೆ ಹೆಗಲು ತಬ್ಬಿಕೊಂಡು ಮೌನಕ್ಕೆ ಶರಣಾಗೋಣ ,ಮನಸ್ಸುಗಳು ಮಾತಾಡಿಕೊಳ್ಳಲಿ .ಬರ್ತೀಯ ಆಲ್ವಾ ???

ನಿನ್ನ ನಿರೀಕ್ಷೆಯಲಿ ನಾನು ........

ಗೂಡಾರ್ಥದ ಹಂಗೇಕೆ ನಮ್ಮ ಹಾಡಿಗೆ ?


ಕವಿತೆ ಸರಳರೇಖೆಯಂತಿರಬಾರದು
ನೂರು ಗೂಡಾರ್ಥಗಳ ಸೃಷ್ಟಿಸಿ
ಭಾವಗಳ ಅಬ್ಬರದಲ್ಲಿ ನೋವುಗಳ ಲಘುವಾಗಿಸಿ
ಸುಲಭಕ್ಕೆ ಅರ್ಥವಾಗಬಾರದು

ಅದರ ವಿನ್ಯಾಸ ,ಲಯ ,ವಿಸ್ತಾರಗಳೆಲ್ಲವೂ
ಕಣ್ಣಿಗೆ ಕಾಣುವ,ಕೈಗೆ ಸಿಗದ
ಕನ್ನಡಿಯೊಳಗಿನ ಗಂಟಿನಂತಿರಬೇಕು

ಹಾಗಂತ ಮೊನ್ನೆ ಕಾವ್ಯವನ್ನು
ಅರೆದು ಕುಡಿದಿರುವ ಪ್ರಕಾಂಡ ಪಂಡಿತರು
ಮೂರು ಮುಕ್ಕಾಲು ಜನ ಸೇರಿದ್ದ
ಸೆಮಿನಾರು ಒಂದರಲ್ಲಿ ಮಾತನಾದಿಕೊಂದರಂತೆ
ರದ್ದಿ ಆಯುವವನು ,ಮಾಂಸ ಮಾರುವವನು
ಮಿಟಾಯಿ ಅಂಗಡಿಯಲ್ಲಿ ನೊಣ ಹೊಡೆಯುವವನು
ಕವಿತೆಯ ಬಗ್ಗೆ ,ಅದರ ಸಾಚಾತನದ ಬಗ್ಗೆ
ಮಾತಿಗೆ ನಿಂತರೆ ಕವಿಯ
ಕಿಮ್ಮತ್ತೆನಾಗಬೇಕೆಂಬುದು
ಅವರ ಆತಂಕವಂತೆ ..
ಹೂವು, ಚಂದ್ರ ,ಬೆಳದಿಂಗಳು ಸಮುದ್ರ
ಮುಂತಾದ ಸುಂದರ ರೂಪಕಗಳ ಮುಂದೆ
ಕೊಚ್ಚಿ ಹೋದ ಬದುಕು,ಮಣ್ಣಿನಡಿಯಲ್ಲಿ ಕೊಳೆತ ದೇಹ
ಹಸಿವಿನ ಸಂಕಟ ,ಮತ್ತು ಸಾಲಕ್ಕೆ ಸತ್ತವನ
ವಿರೂಪ ಚಿತ್ರಗಳನ್ನು ಯಾರಾದರೂ
ಕಾವ್ಯಾವಾಗಿಸುತ್ತಾರೆನ್ರೀ ಎಂದು ತೂಕಡಿಸುತ್ತಿದ್ದ
ಸಭಿಕರ ಮುಂದೆ ಕಿಡಿ ಕಾರಿದರಂತೆ !

ಹಾಳಾಗಿ ಹೋಗಲಿ ಬಿಡಿ
ಟಿ ಎ ಡಿ ಎ ಸೌಖ್ಯದಲಿ
ಅಕಾದೆಮಿಗಳೆಂಬ ಹಾಳು ಕೊಂಪೆಯಲಿ
ಸ್ವರತಿ ಸುಖದಲಿ ಮೈಮರೆತ
ಸಜ್ಜನರ ಸಹವಾಸ ನಮಗೇಕೆ ?

ನೇಗಿಲಿನ ಪ್ರೀತಿಗೆ ಮಣ್ಣು ಮೃದುವಾಗಿ
ಬೀಜ ತೆನೆಯಾಗಿ ತೊನೆಯುವಂತೆ
ಪದ ಹುಟ್ಟುತಿರಲು ಗೂಢ ನಿಗೂಢಗಳ
ಹಂಗೇಕೆ ನಮ್ಮ ಹಾಡಿಗೆ ,ಇರಲಿ ಬಿಡಿ ಅದರ ಪಾಡಿಗೆ ...

Monday, 5 September 2011






 
ಅಗಾಧ
ಕತ್ತಲು
ಬೆಳಕಿನೊಂದಿಗೆ
ಕದನ
ಮಿಂಚುಹುಳು
ನಗುತ್ತಿದೆ ..
ಹಚ್ಚಿಟ್ಟ
ದೀಪ
ಹೊಳೆವ
ಪ್ರತಿಬಿಂಬ
ಇರುಳಿಗೆ
ಸಾವಿರ ಕನಸು
ಉರಿವ
ನೆಲ
ಅಲ್ಲಲ್ಲಿ
ನೀರು
ಹಸಿರ
ಕನಸಿಗೆ ಮುನ್ನುಡಿ
ತುಂಬು
ಹುಣ್ಣಿಮೆ
ಅಲೆಗಳ
ಉಯ್ಯಾಲೆ
ಕಡಲು
ಕಾವ್ಯ
ಬರೆಯುತಿದೆ ....

Monday, 29 August 2011

ಹುಡುಗಿ
ನಿನ್ನ
ಕಣ್ಣಂಚಿಗೆ
ಅದರ
ಸುಳಿಮಿಂಚಿನ ಸಂಚಿಗೆ
ಬಲಿಯಾದೆ
ಈಗ
ರಸ್ತೆಯಂಚಲೇ
ನೆಲೆಯಾದೆ ...
ನಿನ್ನ
ನೆನಪೆಲ್ಲ
ಕಣ್ಣೀರಾಗಿ
ಸುರಿದ ಮೇಲೆ
ಮನಸೀಗ
ಶುಭ್ರ ಶಾಂತ ಸರೋವರ ....
ನಿನ್ನ ಪಾಲಿಗೆ
ನಾನು
ಮುಗಿದ ಅಧ್ಯಾಯ
ಸಂತೋಷವೆಂದರೆ
ನನ್ನ ಬದುಕಿಗೂ
ಇಂದೇ ವಿಧಾಯ
 ಹುಣ್ಣಿಮೆಯ
ಚಂದ್ರ
ನಗುತ್ತಿದ್ದಾನೆ
ಇರುಳು
ಬೆತ್ತಲಾಗುತ್ತಿದೆ ....

Friday, 26 August 2011

ನಿನ್ನ
ನೆನಪುಗಳ
ಅಪಶ್ರುತಿಯಿಂದ
ನನ್ನೊಳಗಿನ
ಹೊಸರಾಗವೊಂದು
ಹಾಡಾಗುತ್ತಲೇ
ಇಲ್ಲ .....
ಬೊಗಸೆ
ತುಂಬ ಪ್ರೀತಿ
ಕಣ್ಣಲ್ಲಿ
ಮುಗಿಯದ
ಕನಸುಗಳ ಬೆಳಕು
ಹೃದಯದಿ
ಸಾವಿರ
ಆಸೆಗಳ ನಗಾರಿ
ನಿನ್ನ ಪ್ರೀತಿಯಲಿ
ನಾನು
ಪೂರ್ಣ ವ್ಯಸ್ತ

ನೀ
ಕೈ ಕೊಡವಿ
ಹೋದೆ ನೋಡು
ಅಲೆಗೆ ಸಿಕ್ಕ
ಮರಳಿನ ಗೋಪುರ
ಕುಸಿದಂತೆ
ಬದುಕಿಂದು ಅಸ್ತವ್ಯಸ್ತ
ಮೋಸ

ಮನದ ಮುಗಿಲಲ್ಲಿ
ಒಲವಿನ
ನಕ್ಷತ್ರವಾಗಬೇಕಿದ್ದ
ನೀನು
ಉಲ್ಕೆಯಂತೆ ಉರಿದು
ನನ್ನನ್ನೇ ಸುಟ್ಟಿದ್ದು......

Tuesday, 23 August 2011

ಏನೂ ಹೇಳದ
ಮಾತಿನ
ಹಂಗೇಕೆ ಪ್ರೀತಿಗೆ
ಕಣ್ಣ ಭಾಷೆಯೇ
ಸಾಕಲ್ಲವೇ ಸಾಕ್ಷಿಗೆ ....
ನಿನ್ನ
ಚಂದವ
ಏನೆಂದು ಬಣ್ಣಿಸಲಿ
ಎಂಬುದೇ ತಲೆಬಿಸಿ
ಕೇಳಿಸಿಕೊಂಡರೆ
ಆ ಚಂದ್ರನಿಗೂ

ಅಸಹನೆಯ ಕಸಿವಿಸಿ
ಅಂದು
ನಿನ್ನ ಪ್ರೀತಿಯ
ಸುತ್ತ
ಬರಿದೆ ಭ್ರಮೆಯ ಚೌಕಟ್ಟು
ತಿಳಿಯಲಿಲ್ಲ
ಮೌನದ ಮುಸುಕು ಹೊದ್ದ
ನಿನ್ನ ಅಂತರಂಗದ
ಒಳಗುಟ್ಟು
ಇಂದು
ಕಾಯುತ್ತಿದ್ದೇನೆ
ಉಸಿರು ನಿಲ್ಲುವ
ಕೊನೆಯ ಕ್ಷಣಕ್ಕಾಗಿ
ಬದುಕನ್ನೇ
ವಿಧಿಯ ಕೈಗಿಟ್ಟು