Sunday, 30 October 2011

ಅಲೆದದ್ದು ಸಾಕು
ಬಿಕನಾಸಿಯಂತೆ
ಪಕ್ಕಕ್ಕೆ ಒಬ್ಬಳು ಬರಲಿ
ಎಂದರು ಮನೆಯವರು
ದಿಕ್ಕಿಲ್ಲದ ಮನೆ ಹುಡುಗಿ
ಸುರ ಸುಂದರಿ
ಹುಡುಗ ಹೇಗೆ ?
ಕೇಳಲಿಲ್ಲ ಅವರು
ಇವರು ಹೇಳಲಿಲ್ಲ
ಕೆಲಸ
ಜಾಸ್ತಿ ಅವನಿಗೆ
ಬಾರು ,ಪಬ್ಬು ,ಸಿಗರೇಟು
ಇಸ್ಪೀಟು ಅಡ್ದೆಯಲಿ
ಥೇಟ್ ಧರ್ಮರಾಯ
ಅದರೂ ನಮ್ಮ ಹುಡುಗ
ಪುಟಕ್ಕಿಟ್ಟ ಚಿನ್ನ
(ಸ್ವಗತ) ಒತ್ತೆಯಿಟ್ಟ ಚಿನ್ನ
ಇನ್ನು ಬಿಡಿಸಿಕೊಂಡಿಲ್ಲ
ಒಳಮನೆಯಲ್ಲಿ
ಹುಡುಗಿ
ಕಣ್ಣೀರಿಡುತ್ತಿದೆ
ಪಡಸಾಲೆಯ ಮಂದಿಗೆ
ಮುಖವಿಲ್ಲ
ಸುಮ್ಮನೆ ಬಿಂಕದ ಮಾತು
ಇಲ್ಲೇನು ಕಡಿಮೆ ನಿನಗೆ
ಎಲ್ಲವು ಇದೆ
ಬೇಕಾದ್ದು ಬಿಟ್ಟು
ತುಟಿಗೆ ಬಂದ ಮಾತು
ಗಂಟಲಲ್ಲೇ ಉಳಿಯುತ್ತದೆ
ಈಗೀಗ
ಹುಡುಗಿ ನಗುವುದನ್ನು
ರೂಡಿ ಮಾಡಿಕೊಂಡಿದೆ
ಲೋಕದ ಕಣ್ಣಿಗೆ ಮಾತ್ರ
ದೊಡ್ಡವರ ಮನೆ ಜನ
ಅವಳ ಕಣ್ಣೀರನ್ನು
ಪ್ರತಿಷ್ಠೆಯ ಮುಖವಾಡದ
ಹಿಂದೆ ಬಚ್ಚಿಡಲಾಗಿದೆ
ಅವಳ
ಪ್ರಶ್ನೆಗಳಿಗೆ
ಅವನಲ್ಲಿ ಉತ್ತರವಿಲ್ಲ
ಅವಳ
ಮೌನ ಮತ್ತು ನಗುವನ್ನು
ಎದುರಿಸಲು ದೈರ್ಯವು ಇಲ್ಲ
.

ಬೆಂಗಳೂರು

ಇಲ್ಲಿ
ಬದುಕು ದುಬಾರಿ
ಸಾವು ಬಿಕಾರಿ

Friday, 28 October 2011

ನೀನೆ
ತುಂಬಿರುವ ಮನಸಿಗೆ
ತಿವಿಯಬೇಡ ಗೆಳತಿ
ನಿನ್ನ ಮೌನದ ಈಟಿಯಿಂದ
ನಿನ್ನ
ಮೃದು ಮಧುರ
ನೆನಪುಗಳಿಗೆ ನೋವಾಗಿ
ಹೊರಟು ಬಿಟ್ಟಾವು  ಅಲ್ಲಿಂದ ...

ನಾನು ಮರ
ನೀನು ಬಳ್ಳಿ
ಹಬ್ಬಿದಷ್ಟು ಎತ್ತರ
ತಬ್ಬಿದಷ್ಟು ಮಧುರ
ಅದರೂ ....
ನಮ್ಮ ನಡುವೆ

ಕಿ
ಷ್ಟು
ಅಂತರ ...?
ಕಣ್ಣಲ್ಲಿ
ಇರಿಯುವುದಿಲ್ಲ
ಮಾತಲ್ಲಿ
ತಿವಿಯುವುದಿಲ್ಲ
ಎದುರಾದಾಗಲೆಲ್ಲ
ಸುಮ್ಮನೆ
ನಗುತ್ತಾಳೆ
ಕೊಲ್ಲುವ ಕಲೆ
ಅವಳಿಗೆ ಕರಗತ

Monday, 24 October 2011

ಅವಳ
ಉಸಿರಲ್ಲಿ
ಬೆರೆತು
ಹೋಗಬೇಕೆಂದುಕೊಂಡೆ
ವಿಷವನ್ನೇ
ಉಸಿರಾಡಿದಳು
ಅವಳ
ಮಡಿಲಲ್ಲಿ
ಮಗುವಾಗಬೇಕೆಂದುಕೊಂಡೆ
ಉಸಿರನ್ನೇ
ನಿಲ್ಲಿಸಿ ಬಿಟ್ಟಳು
ಚೂರಾದ ಹಾಳೆ
ಆರಿದ ಸಿಗರೇಟು
ಹರಿದ ಚಪ್ಪಲಿ
ಮತ್ತು
ಕಣ್ಣಿನಲಿ ನಿನ್ನ ನಿಶೆ
ನಾನು ನಿಜಕ್ಕೂ
ಸುಖಿ ...
ಹೂವಿಗೇನು ಗೊತ್ತು
ದೇವರ
ತಲೆಯ ಮೇಲೋ
ಹೆಣದ
ಎದೆಯ ಮೇಲೋ
ಅದು
ಎತ್ತಿಕೊಂಡವರ
ಚಿತ್ತ
ನೆರಳಲ್ಲಿ ಮುದುಡುತ್ತದೆ
ಬಿಸಿಲಲ್ಲಿ ಬಾಡುತ್ತದೆ
ತಲೆಯ ಮೇಲಿಟ್ಟರೆ
ಭಕ್ತಿ ಮತ್ತು ಸಂತೋಷ
ಎದೆಯ ಮೇಲಿಟ್ಟರೆ
ದುಃಖ ಮತ್ತು ಕಣ್ಣೀರು

Tuesday, 18 October 2011

ನನ್
ಹೃದಯದಲ್ಲಿ
ಜಾಗ ಖಾಲಿ ಇದೆ
ಅಂತ ಇದುವರೆಗೂ
ಯಾವ್ ಹುಡ್ಗಿನೂ
ಜಾಹಿರಾತು ಕೊಟ್ಟಿಲ್ಲ

ಹಾಗಂತ
ಯಾವ್ ಹುಡುಗರೂ
ಹುಡುಗೀರ
ಅಪ್ಪಣೆ ಕೇಳಿ
ಅವರ ಹೃದಯದೊಳಗೆ
ಪ್ರವೇಶ ಮಾಡಿಲ್ಲ...
ಬದುಕು
ಯಾರೋ
ಬಿಸಾಕಿದ ದಾರಿ
ಸುಮ್ಮನೆ ನಡೆಯಬೇಕು
ಗುರುವು ಬೇಡ ,ಗುರಿಯೂ ಬೇಡ
ದೇಹ
ಚಲಿಸುತ್ತಿದೆ
ಅದಷ್ಟೇ ಸತ್ಯ
ಮತ್ತೆ ಅದರೊಳಗಿನ ಆತ್ಮ ?
ಸಂತೆಯೊಳಗೆ
ಮೌನ ಹುಡುಕಿದಂತೆ
ಎಡವಿದ್ದಕ್ಕೆ ರಕ್ತದ
ಸಾಕ್ಷಿಯಿದೆ
ಮತ್ತೆ ಎದ್ದಿದ್ದಕ್ಕೆ
ಅರ್ಧ ದಾರಿ ಸವೆದಿದೆ
ಗೆದ್ದಿದ್ದಕ್ಕೆ
ರೆಕ್ಕೆಯೇನು ಬಂದಿಲ್ಲ
ಸೋತಿದ್ದಕ್ಕೆ
ನನ್ನಲ್ಲಿ ನೆಪವಿಲ್ಲ ...

Tuesday, 4 October 2011

ಒಹ್ ದೇವ್ರೇ ..................!!!11

   
ದೇವ್ರು ಅಂತ ಯಾಕೆ ನಿಂಗೆ ಕೈಯ ಮುಗಿಬೇಕು
ಏನು ಕಿಸ್ದಿದ್ದೀ ಅಂತ ಆರತಿ ಬೆಳಗಬೇಕು
ಇರೋ ಕಷ್ಟ ಇದ್ದೆ ಇದೆ ,ನಮಗೇನ ಹೊಸದಲ್ಲ
ನೋಡ್ಕಂಡ್ ಸುಮ್ನೆ ಕುಂತ್ಕಂಡಿದ್ದೀ ,ನಿಂಗೆ ಕಣ್ಣಿಲ್ಲ
ನೀನು ಬರಿ ಕಲ್ಲು ಅಂತ ತಿಳಿದೋರ್ ಹೇಳ್ತಾರೆ
ಅದರೂ ಜನ ಕಷ್ಟ ಅಂದ್ರೆ, ನಿಂಗೆ ಅಡ್ಡ ಬೀಳ್ತಾರೆ
ಜಾತಿಗೊಂದು ಮಟ ಮಾಡಿ ನಿನ್ ದಯೆ ಅಂತಾರೆ
ಧರ್ಮಕ್ಕಿಷ್ಟು ವಿಷ ಬೆರಸಿ ,ಜನಗಳ್ ನೆತ್ತಿ ಸವರ್ತಾರೆ
ಅನ್ನ ಕೊಡೋನ ಬಾಯಿಗೆ ಹಿಡಿ ಮಣ್ಣು ಹಾಕ್ತಾರೆ
ಅವನ ಎದೆ ಮೇಲೆ ರಸ್ತೆ
ಮಾಡಿ ನೈಸು ಅಂತಾರೆ
ಒಳಗೊಳಗೆ ದುಷ್ಟರ ಜೊತೆ ಶಾಮೀಲ್ ಆಗ್ಬಿಟ್ಯ
ಪರ್ಸ0ಟೇಜು ಲೆಕ್ಕದಲ್ಲಿ ನೀನು ಡೀಲಿಗ್ ಕುಂತಬಿಟ್ಯ

ಈ ಹಲ್ಕಟ್ ಮಂದಿ ಜೊತೆ ಸೇರಿ ಹಾಳಾಗ್ ಹೋಗ್ಬಿಟ್ಟೆ
ಗ್ರಾನೈಟ್ ಹಾಸಿದ್ ನೆಲದ ಮೇಲೆ ನಿಂತ್ಕಂಡ್ ಹೈಟೆಕ್ ಆಗ್ಬಿಟ್ಟೆ
ಹಿಂಗೆ ಮಾಡ್ತಾ ಹೋದ್ರೆ ನಿಂಗೆ ಕಷ್ಟ ಆಗ್ತದೆ
ಬಡವರ ಸಿಟ್ಟು ರಟ್ಟೆಗೆ ಬಂದ್ರೆ ನಿನ್ ಮಾನ ಹೋಯ್ತದೆ

ಛಿ ಥೂ ಅನ್ನೋಕ್ ಮುಂಚೆ ಒಳ್ಳೆರ್ಗೆ ಒಳ್ಳೇದ್ ಮಾಡ್ಬಿಡು
ಕೆಟ್ಟವರಿಗೆ ಒಂದ್ ದಾರಿ ತೋರ್ಸಿ ದೇವ್ರೇ ಆಗ್ಬಿಡು

Monday, 3 October 2011

ನಿನ್
ಪ್ರೀತಿನ
ಒಂಚೂರು
ಸಾಲ ಕೊಡೆ
ಬೇಕಾದ್ರೆ ...
ನನ್ನ ಹೃದಯಾನ
ಅಡ
ಇಟ್ಕೊಂಡ್ ಬಿಡೆ

Saturday, 1 October 2011

ಜಗತ್ತಿನ
ಎಲ್ಲ ಸುಖಾನೂ
ತಂದು
ನಿನ್ನ ಮುಂದೆ
ಸುರಿತೀನಿ ಅಂತ
ಅಂಗೈಯಲ್ಲಿ
ಆಕಾಶ ತೋರಿಸಲ್ಲ ಕಣೇ
ನಾನೇ
ನಿನ್ನ ಜಗತ್ತಾಗಿರುವಾಗ
ಬೇರೆಲ್ಲ
ಬರೀ ಸುಳ್ಳು ಕಣೇ